ಬಿಜೆಪಿಗೆ ಬಹುಮತ ನೀಡಿ, ಕುಟುಂಬ ರಾಜಕಾರಣದ, ಜಾತಿವಾದದ, ಭ್ರಷ್ಟಾಚಾರ ಪಕ್ಷವನ್ನ ಮೂಲೆಗೆ ಕಳುಹಿಸಿ: ಅಮಿತ್ ಶಾ | JANATA NEWS
ಬೆಂಗಳೂರು : ಒಂದು ಬಾರಿ ಬಿಜೆಪಿಗೆ ಬಹುಮತ ನೀಡಿ, ಕುಟುಂಬ ರಾಜಕಾರಣದ, ಜಾತಿವಾದದ, ಭ್ರಷ್ಟಾಚಾರ ಪಕ್ಷವನ್ನ ಮೂಲೆಗೆ ಕಳುಹಿಸಿ ಎಂದು ಷಾ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು ”ಸಿದ್ದರಾಮಯ್ಯ, ಕುಮಾರಸ್ವಾಮಿ ನೋಡಿ ಜನಕ್ಕೆ ಸಾಕಾಗಿದೆ” ಮೋದಿ ಅಭಿವೃದ್ಧಿ ನೋಡಿ ಕರ್ನಾಟಕ ಜನ ಮತ ಹಾಕುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಯೋಜನೆ ನೀಡಿದ್ದಾರೆ ಎಂದು ನುಡಿದರು.
ಗರೀಬಿ ಹಠಾವೋ ಯೋಜನೆ ತಂದರೂ ಕಾಂಗ್ರೆಸಿಗರು ಬಡತನ ನಿರ್ಮೂಲನೆ ಮಾಡಿಲ್ಲ, ಬಡವರನ್ನೇ ನಿರ್ಮೂಲನೆ ಮಾಡಿದರು, ಅವರನ್ನು ಅಭಿವೃದ್ಧಿ ಆಗದಂತೆ ನೋಡಿಕೊಂಡರು. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಬಡವರ ಅಭಿವೃದ್ಧಿಗೆ ಹಲವು ಯೋಜನೆ ತಂದಿತು. ಕರೊನಾ ಬಂದಾಗಲೂ ಮೋದಿಯವರು ಲಸಿಕೆ ತಂದು ಎಲ್ಲರಿಗೂ ಉಚಿತವಾಗಿ ಕೊಡಿಸಿದರು. ದೇವೇಗೌಡ, ಸಿದ್ದರಾಮಯ್ಯ ಬಡವರ ಬಗ್ಗೆ ಮಾತನಾಡುತ್ತಾರೆ, ಅವರು ಬಡತನ ನಿರ್ಮೂಲನೆ ಮಾಡಿದ್ರಾ? ಬಹಿರಂಗ ಚರ್ಚೆಗೆ ಬರಲಿ, ನಾನು ಸವಾಲು ಹಾಕುತ್ತೇನೆ ಎಂದು ಷಾ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ. ಜೆಡಿಎಸ್ನವರು ನಮ್ಮ ಜೊತೆ ಬರಲು ಯತ್ನಿಸುತ್ತಾರೆ. ಆದರೆ ನಾವು ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ. ಈ ಸಲ ನೇರಾನೇರ ತ್ರಿಕೋನ ಹೋರಾಟ ಇರಲಿದೆ, ನಾವು ನೇರವಾಗಿ ಸ್ಪರ್ಧೆ ಮಾಡಿ ವಿಜಯ ಪಡೆಯುತ್ತೇವೆ, ಯಾರು ಬೇಕು ಎಂದು ಜನರು ತೀರ್ಮಾನ ಮಾಡಲಿ ಎಂದು ಷಾ ಹೇಳಿದರು.
ಬಿಜೆಪಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿ ಏರುಧ್ವನಿಯಲ್ಲಿ ವಾಗ್ದಾಳಿ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ಚುನಾವಣೆ ಬಂದಾಗ ಬಿಜೆಪಿ ಜೊತೆ ಒಪ್ಪಂದದ ಬಗ್ಗೆ ಮಾತನಾಡುತ್ತದೆ. ಆದರೆ ಬಿಜೆಪಿ ಏಕಾಂಗಿಯೇ ಚುನಾವಣೆ ಎದುರಿಸಲಿದೆ. ಏಕಾಂಗಿಯಾಗಿಯೇ ಅಧಿಕಾರಕ್ಕೆ ಬರಲಿದೆ. ಯಾರ ಜೊತೆಯೂ ಯಾವ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇಲ್ಲಿ ಟಿಪ್ಪು ಸುಲ್ತಾನ್ ನ ಹೀರೊ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.ದೇವೇಗೌಡರ ವಿರುದ್ಧ ವಾಗ್ದಾಳಿ ಮುಂದುವರೆಸಿ, ನೀವು ಪ್ರಧಾನಿ ಆಗಿದ್ದೀರಿ. ಮುಖ್ಯಮಂತ್ರಿ ಆಗಿದ್ದೀರಿ ಆದರೂ ಏನು ಮಾಡಿಲ್ಲ. ಆದರೆ ನಾವು ಏನು ಮಾಡಿದ್ದೇವೆ ಎಂದು ನಮ್ಮ ಯುವ ಮೋರ್ಚಾ ಕಾರ್ಯಕರ್ತರು ನಿಮಗೆ ಹೇಳುತ್ತಾರೆ ಎಂದರು.
ಜನರನ್ನು ತಲುಪುವುದಕ್ಕೆ ಇದು ಸರಿಯಾದ ಸಮಯ. ಕಾರ್ಯಕರ್ತರು ತಲೆಬಗ್ಗಿಸುವ ರೀತಿಯ ಕೆಲಸ ಮಾಡಿಲ್ಲ. ಬಡವರ ಮನೆವರೆಗು ವಿದ್ಯುತ್ ತಲುಪುವಂತೆ ಮಾಡಿದ್ದು ನಾವು. ಕಟ್ಟಕಡೆಯ ಹಳ್ಳಿಗಳಿಗೆ ಅಡುಗೆ ಅನಿಲ ತಲುಪಿಸಿದ್ದು ನಾವೆ.. ಮೋದಿಯವರ ಸಂದೇಶ ತೆಗೆದುಕೊಂಡು ಮನೆ ಮನೆಗೆ ಹೋಗಬೇಕು ಎಂದು ಬೂತ್ ಕಾರ್ಯಕರ್ತರಿಗೆ ಷಾ ಕರೆ ನೀಡಿದರು. ಒಂದು ಬಾರಿ ಬಿಜೆಪಿಗೆ ಬಹುಮತ ನೀಡಿ, ಕುಟುಂಬ ರಾಜಕಾರಣದ, ಜಾತಿವಾದದ, ಭ್ರಷ್ಟಾಚಾರ ಪಕ್ಷವನ್ನ ಮೂಲೆಗೆ ಕಳುಹಿಸಿ ಎಂದು ಷಾ ಹೇಳಿದರು.
ಜೆಡಿಎಸ್ ಕಾಂಗ್ರೆಸ್ ಚುನಾವಣೆ ಹತ್ತಿರ ಬರುತ್ತಾ ಇದ್ದಂತೆ ಒಟ್ಟಿಗೆ ಕೂರುತ್ತಾರೆ. ಅವರ ಆಡಳಿತ ನೋಡಿದ್ದೀರಿ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಯಶಸ್ವಿ ಆಗಿ ಸರ್ಕಾರ ನಡೆಸಿದ್ದಾರೆ. ದಕ್ಷಿಣದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಬೇಕಿದೆ. ದಕ್ಷಿಣ ಭಾರತಕ್ಕೆ ಕರ್ನಾಟಕ ಹೆಬ್ಬಾಗಿಲು. ಕರ್ನಾಟಕದ ಮೂಲಕ ದಕ್ಷಿಣ ಭಾರತಕ್ಕೆ ಬಿಜೆಪಿ ಪ್ರವೇಶಿಸುತ್ತಿದೆ ಎಂದು ಹೇಳಿದರು.
ಮುಂದಿನ 6 ತಿಂಗಳು ಕಾರ್ಯಕರ್ತರು ಪಕ್ಷವನ್ನು ಬಲಪಡಿಸಿ. ಈ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ. ಕರ್ನಾಟಕದ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ. ಕರ್ನಾಟಕದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ. 2023ರ ಚುನಾವಣೆಯಲ್ಲಿ ಗೆದ್ದು ಮತ್ತೆ ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.